Thursday, January 23, 2014

Yashvanth Hali Bandi

ಹಳಿತಪ್ಪಿದ ಬಂಡಿ..

ತುಂಬಾ ನೋವಾಗ್ತಿದೆ ಮನಸ್ಸಿಗೆ ನಿನ್ನೆ ಅವರ ಪಾರ್ಥೀವ ಶರೀರವನ್ನು ಅಂತಿಮವಾಗಿ ಕಂಡದ್ದು ಬನಶಂಕರಿ ಚಿತಾಗಾರದಲ್ಲಿ..ಸಂಜೆ ೬ ಗಂಟೆಯಲ್ಲಿ ಚಿತಾಗಾರದ ಮುಂದೆ ...ಕಲಾವಿದರ ದಂಡೇ ತುಂಬಿತ್ತು....

ಯಶವಂತ ಹಳಿಬಂಡಿಯವರನ್ನು ಕಳೆದುಕೊಂಡ ಇಂದು ಕಲಾ ದೇವಿ ತಬ್ಬಲಿಯಾಗಿದ್ದಾಳೆ...
.ಶ್ರಿಯುತರು..ಮಡದಿ ಮತ್ತು ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ...ಬಂದ್ಡಿಯವರ ಆತ್ಮಕ್ಕೆ ಶಾಂತಿ ಸಿಗಲಿ...ಆವರ ಕುಟುಂಬಕ್ಕೆ ನೋವ ಮರೆಯುವ ಶಕ್ತಿ ನೀಡಲೆಂದು
ಹೊಸಬೆಳಕು ಟ್ರಸ್ಟ್ ನ ಸಕಲರ ಪರವಾಗಿ ಭಗವಂತನಲ್ಲಿ ಪ್ರಾರ್ಥಿಸೋಣ....

ಪಾತರಗಿತ್ತಿ ಪಕ್ಕ ಖ್ಯಾತಿ ಗಾಯಕ ಯಶವಂತ ಹಳಿಬಂಡಿ ವಿಧಿವಶ

ಬೆಂಗಳೂರು, ಜ.22: 'ವರಕವಿ ಬೇಂದ್ರೆಯವರ 'ಪಾತರಗಿತ್ತಿ ಪಕ್ಕ ನೋಡಿದ್ದೇನ ಅಕ್ಕ..' ಹಾಡಿನ ಮೂಲಕ ಖ್ಯಾತಿ ಪಡೆದಿದ್ದ ಸುಗುಮ ಸಂಗೀತ ಕ್ಷೇತ್ರದ ಗಾಯಕ ಯಶವಂತ ಹಳಿಬಂಡಿ ಅವರು ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಶವಂತ ಹಳಿಬಂಡಿ ಅವರ ಪಾರ್ಥೀವ ಶರೀರವನ್ನು ಬ್ಯಾಂಕ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಧಾರಾವಾಡದಲ್ಲಿ 1950, ಮೇ 25ರಂದು ಜನಿಸಿದ ಯಶವಂತ ಹಳಿಬಂಡಿ ಅವರು ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಭಾವಗೀತೆ, ಜಾನಪದ ಸೇರಿದಂತೆ ಸುಮಾರು 250ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಬಾರೊ ಸಾಧನ ಕೇರಿಗೆ... ಎಂದು ಕರೆಯುತ್ತಿದ್ದ ಕಂಠ ಇನ್ನಿಲ್ಲ. ವರಕವಿ ದ.ರಾ ಬೇಂದ್ರೆವರ ಎದುರೇ ಅವರ ಗೀತೆಯನ್ನು ಹಾಡಿ ಅವರ ಮೆಚ್ಚುಗೆ ಆಶೀರ್ವಾದ ಪಡೆದಿದ್ದು ಯಶವಂತ ಹಳಿಬಂಡಿ ಅವರ ಸಾಧನೆ.ಬಾಳಪ್ಪ ಹುಕ್ಕೇರಿ, ಅನುರಾಧ ಧಾರೇಶ್ವರ್ ಮುಂತಾದವರ ಗಾಯನದಿಂದ ಪ್ರಭಾವಿತರಾಗಿ ಗಾಯನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಯಶವಂತ ಅವರು ಸುಮಾರು ನಾಲ್ಕು ದಶಕಗಳ ಕಾಲ ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮ ನೆಲೆ ಕಂಡುಕೊಂಡರು.
ವರಕವಿ ದ.ರಾ ಬೇಂದ್ರೆ ಮೆಚ್ಚಿದ ಗಾಯಕ  : ವರಕವಿ ದ.ರಾ ಬೇಂದ್ರೆ ಅವರ ಮೆಚ್ಚುಗೆ ಗಳಿಸಿದ ಯಶವಂತ ಅವರ ಕಂಠ ಸಿರಿಯಲ್ಲಿ ಹೊರಹೊಮ್ಮಿರುವ ಪಾತರಗಿತ್ತಿ ಪಕ್ಕ ಹಾಡು

ಬೇಂದ್ರೆ ಮೆಚ್ಚುಗೆ ಗಳಿಸಿದ ಆ ಕ್ಷಣ ಯಶವಂತರು ಎಲ್ಲೇ ಹಾಡಲು ಹೋದರೂ ವರಕವಿಯನ್ನು ಭೇಟಿ ಮಾಡಿದ ಸಂದರ್ಭ ನೆನೆಯದೇ ಇರುತ್ತಿರಲಿಲ್ಲ. ಆಗಿನ್ನೂ ಧಾರವಾಡದ ಆಕಾಶವಾಣಿ ಅನುಮೋದಿತ ಗಾಯಕರಾಗಿ ನೇಮಕಗೊಂಡಿದ್ದರು. ಬೇಂದ್ರೆ ಅವರು ತಾವರೆಗೇರಿ ಆಸ್ಪತ್ರೆಯಲ್ಲಿದ್ದಾಗ ಆಕಾಶವಾಣಿಯಲ್ಲಿ 'ಮೂಡಲ ಮನೆಯ....' ಹಾಡು ಕೇಳಿ ಯಶವಂತರನ್ನು ಕರೆಸಿಕೊಂಡರು. ಅಳುಕಿನಿಂದಲೇ ಅವರ ಬಳಿ ಹೋಗಿ ನಿಂತ ಯಶವಂತರನ್ನು ನೋಡಿ ಬೇಂದ್ರೆ ಮಾಸ್ತರರು 'ಏನಹಾಡಿದ್ಯೋ ಮುಂಜಾನಿ ಹುಚ್ಚು ಹಿಡಿಸಿದಿ ನನಗ...'ಎಂದಾಗ ಹುಡುಗ ಹಳಿಬಂಡಿಗೆ ಮಾತೇ ಹೊರಡದಾಯಿತಂತೆ. ನಾಡಿನ ಪ್ರಸಿದ್ಧ ಕವಿಯೊಬ್ಬರಿಂದ ಪ್ರಶಂಸೆ, ಯಾವ ಪ್ರಶಸ್ತಿಯೂ ಸರಿಗಟ್ಟಲಾಗದ್ದು ಎಂದು ಯಶವಂತರು ಸದಾಕಾಲ ಸ್ಮರಿಸುತ್ತಿದ್ದರು.

ಧಾರವಾಡ ಸೊಗಡಿನ ಹೆಮ್ಮೆಯ ಪುತ್ರ ಯಶವಂತ ಹಳಿಬಂಡಿ  : ಅವರು 1950ರ ಮೇ 25ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಹನುಮಂತ ಹಳಿಬಂಡಿ ಹಾಗೂ ತಾಯಿ ಬಸವೇಶ್ವರಿ. ಚಿಕ್ಕಂದಿನಲ್ಲೇ ಧಾರವಾಡದ ಪರಿಸರದಲ್ಲಿ ಹಾಸುಹೊಕ್ಕಾಗಿದ್ದ ಹಿಂದೂಸ್ಥಾನೀ ಸಂಗೀತಕ್ಕೆ ಯಶವಂತರು ಮಾರುಹೋದರು. ಲಕ್ಷ್ಮಣರಾವ್ ದೇವಾಂಗರಲ್ಲಿ ಮೊದಲಿಗೆ ಶಿಷ್ಯವೃತ್ತಿಯನ್ನು ಆರಂಭಿಸಿದರು. ಕೆಲವು ವರ್ಷಗಳ ನಂತರ ಹೆಚ್ಚಿನ ಪರಿಣಿತಿಗಾಗಿ ನಾರಾಯಣ ರಾವ್ ಮಜುಂದಾರ್ ಅವರಲ್ಲಿ ಶಿಕ್ಷಣ ಮುಂದುವರಿಸಿದರು. ಹೀಗೆ ಬಹಳಷ್ಟು ವರ್ಷ ಹಿಂದೂಸ್ತಾನಿ ಗಾಯನದ ತಾಲೀಮು ನಡೆಸಿದರು. ಬಾಳಪ್ಪ ಹುಕ್ಕೇರಿ, ಅನುರಾಧ ಧಾರೇಶ್ವರ್ ಗಾಯನದಿಂದ ಪ್ರಭಾವಿತರಾದವರು ಮುಂದೆ ಸುಗಮ ಸಂಗೀತ ಕ್ಷೇತ್ರವನ್ನು ಆಯ್ದುಕೊಂಡರು.

ಉದ್ಯೋಗದ ಜತೆಗೆ ಜತೆಗೆ ಹಾಡುಗಾರಿಕೆ  : ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸಕ್ಕೆ ಸೇರಿ ಬೆಂಗಳೂರಿಗೆ ಬಂದ ಮೇಲೂ ಯಶವಂತ್ ಹಾಡುಗಾರಿಕೆ ಮುಂದುವರೆಸಿದರು.ಧಾರವಾಡದ ಆಕಾಶವಾಣಿಯ ಮಕ್ಕಳ ಕಾರ್ಯಕ್ರಮ 'ಗಿಳಿವಿಂಡು' ವಿನಲ್ಲಿ ಹಾಡಿ ಸೈ ಎನ್ನಿಸಿಕೊಂಡಿದ್ದ ಯಶವಂತ್ ಅವರು ಮುಂದೆ ದೂರದರ್ಶನದ ಮೂಲಕ ಮನೆ ಮಾತಾದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸುಗಮ ಸಂಗಿತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಹಸ್ರಾರು ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೀಡಿರುವ ಹಳಿಬಂಡಿ ತಮ್ಮದೇ ಆದ ತಂಡ ಕಟ್ಟಿ, ನಾಡಿನ ಉದ್ದಗಲಗಳಲ್ಲಿ ಸಂಚರಿಸಿ ಸುಪ್ರಸಿದ್ಧ ಕವಿಗಳ ಕವಿತಾಮೃತವನ್ನು ಸಂಗೀತಪ್ರಿಯರಿಗೆ ಉಣಬಡಿಸುತ್ತಾ ಸಾಗಿದ್ದಾರೆ.

ವೈವಿಧ್ಯಮಯ ಪ್ರತಿಭಾವಂತ ವ್ಯಕ್ತಿ ಯಶವಂತ ಯಶವಂತ ಹಳಿಬಂಡಿ :  ಅವರು ಗಾಯಕರಷ್ಟೇ ಅಲ್ಲ ಚಿತ್ರಕಲೆಯನ್ನು ಅಭ್ಯಸಿಸಿದ್ದರು. ಉತ್ತಮ ಸಂಗೀತ ಸಂಯೋಜಕರು, ಸಂಗೀತ ನಿರ್ದೇಶಕ, ಮರದ ಹಲಗೆಗಳಲ್ಲಿ ಹಾಗೂ ದಪ್ಪ ಕಾಗದದಲ್ಲಿ ಮನೆ, ಮಹಲುಗಳ ವಿನ್ಯಾಸ ಮಾಡುವುದರಲ್ಲಿ ಹಳಿಬಂಡಿ ಸಿದ್ಧ ಹಸ್ತರಾಗಿ ವಾಸ್ತುಶಿಲ್ಪಶಾಸ್ತ್ರದಲ್ಲೂ ಆಸಕ್ತಿ ವಹಿಸಿದ್ದರು. ಕಟ್ಟಡಗಳ ಮಾದರಿ ವಿನ್ಯಾಸ (ಮಿನಿಯೇಚರ್ ಮಾಡಲಿಂಗ್) ರಚನೆ ಮತ್ತೊಂದು ಪ್ರಮುಖ ಹವ್ಯಾಸ. ಕರ್ನಾಟಕ ಪತ್ರಕರ್ತರ ಸಹಕಾರಿ ಸಂಘದ ಸುವರ್ಣಭವನ ಇವರ ಮಿನಿಯೇಚರ ಮೇಲೆ ರಚಿಸಿದ ಕಟ್ಟಡ. ಓದಿದ್ದು ಪಿ.ಯು. ವರೆಗೆ, ಡ್ರಾಯಿಂಗ್ ಟೀಚರ್ಸ್ ಕೋರ್ಸ್ ಮುಗಿಸಿ ಟ್ರೀಸರ್ ಆಗಿ ಸೇರಿದ್ದು ಧಾರವಾಡದ ಕರ್ನಾಟಕ ಪವರ್ ಕಾರ್ಪೋರೇಶನ್ ನಲ್ಲಿ ನಂತರ ಬೆಂಗಳೂರಿನಲಿ ಅದೇ ವೃತ್ತಿ ಮುಂದುವರೆಸಿದ್ದರು.

ಹಲವು ಮೆಲಕು ಹಾಕುವ ಗೀತೆಗಳನ್ನು ಹಾಡಿದ್ದಾರೆ  : ಭಾವಗೀತೆಗಳ ಜೊತೆ ಜೊತೆಗೆ ಭಕ್ತಿಗೀತೆ, ಜಾನಪದಗೀತೆ, ಶರಣರ ಪದ, ವಚನ , ತತ್ವಪದ ಹೀಗೆ ಹಲವು ಪ್ರಕಾರದಲ್ಲಿ ಹಳಿಬಂಡಿ ತಮ್ಮ ದನಿಯಿಂದ ಪ್ರಸಿದ್ಧರಾಗಿದ್ದಾರೆ. ಕರ್ನಾಟಕ ಸರ್ಕಾರ ಆಯೋಜಿಸುವ ಹಂಪಿ ಉತ್ಸವ, ಕದಂಬೊತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವ, ಕರಾವಳಿ ಉತ್ಸವದಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗು ಗಾಯಕರಾಗಿ ಮನಗೆದ್ದಿದ್ದಾರೆ. ಯಶವಂತ ಹಳಿಬಂಡಿ ಅವರು ಹಾಡಿರುವ ಬೇಂದ್ರೆಯವರ ಪಾತರಗಿತ್ತಿಪಕ್ಕ ನೋಡಿದ್ದೇನ ಅಕ್ಕ', 'ಹೋಗು ಮನಸೆ ಹೋಗು ನಲ್ಲೆ ಇರುವಲ್ಲಿ ಹೋಗು..., ' 'ಕುಣಿಯೋಣು ಬಾರಾ ಕುಣಿಯೋಣು ಬಾ...,' 'ನಾ ಸಂತಿಗಿ ಹೋಗಿನ್ನಿ ಆಕೆ ತಂದಿದ್ದಳೂ ಬೆಣ್ಣಿ...' 'ಎಲ್ಲೋ ಜೋಗಪ್ಪ ನಿನ್ನ ಅರಮಾನೆ...' 'ಕುಂಬಾರಕ್ಕಿ ಈಕಿ ಕುಂಬಾರಕ್ಕಿ,..' 'ಬಾರೊ ಸಾಧನ ಕೇರಿಗೆ ಗೀತೆ..' ಮುಂತಾದ ಗೀತೆಗಳಿಗೆ ಯಶವಂತ ದನಿಯಾಗಿದ್ದರು.

ಸುಗಮ ಸಂಗೀತ ಸಾರ್ವಭೌಮ ಯಶವಂತ : ರಾಜ್ಯ ಸರ್ಕಾರ ಕರ್ನಾಟಕ ಕಲಾಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ. ಭಾವಗೀತೆ, ಭಕ್ತಿಗೀತೆ, ಜಾನಪದ, ವಚನ ಮುಂತಾದ 250ಕ್ಕೂ ಹೆಚ್ಚು ಧ್ವನಿ ಸುರುಳಿಗಳ ಹಾಡುಗಾರರು. ಹಲವಾರು ಚಲನಚಿತ್ರಗಳಿಗೂ ಗಾಯನ, ಕರ್ನಾಟಕ ಸರಕಾರದ ಹಂಪಿ ಉತ್ಸವ, ಕದಂಬ ಉತ್ಸವ, ಕಿತ್ತೂರು ಉತ್ಸವ, ಕರಾವಳಿ ಉತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವಗಳಲ್ಲಿ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಭಾಗಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ, ರಾಜ್ಯಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು. ಸುಗಮ ಸಂಗೀತ ಸಾರ್ವಭೌಮ, ಬೆಂಗಳೂರು ರತ್ನ ಮುಂತಾದ ಬಿರುದುಗಳು.

ಕೃಪೆ oneindia.in.ಧನ್ಯವಾದ..

No comments:

Post a Comment